ಆದಿನಾಥ ಸ್ವಾಮಿ ಬಸದಿ, ಬಾಳ್ತಿಲ. ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದಲ್ಲಿ ಈ ಬಸದಿಯಿದೆ. == ಸ್ಥಳ == ಬಂಟ್ವಾಳ ತಾಲೂಕಿನ ಬಾಳ್ತಿಲ ಗ್ರಾಮದಲ್ಲಿ ಈ ಬಸದಿಯಿದೆ. ಇದು ಮೂಡಬಿದಿರೆ ಜೈನ ಮಠದ ಧಾರ್ಮಿಕ ವ್ಯಾಪ್ತಿಗೆ ಒಳಪಟ್ಟಿದೆ ಕಲ್ಲಡ್ಕ-ಉಪ್ಪಿನಂಗಡಿ ರಸ್ತೆಯಲ್ಲಿ ಎಂಬ ಪ್ರದೇಶದಲ್ಲಿ ಎಡಕ್ಕೆ ತಿರುಗಿ ಒಳ ರಸ್ತೆಯಲ್ಲಿ ಸುಮಾರು ಮೂರು ಕಿಲೋಮೀಟರ್ ಸಾಗಿದರೆ ಈ ಬಸದಿಯನ್ನು ಸಂಪರ್ಕಿಸಬಹುದು. == ನಿರ್ಮಾಣ == ಬಸದಿಯು ದೇವರಾಜ್ ರೈಗಳ ಪ್ರೋತ್ಸಾಹದಿಂದ ಬಾಳ್ತಿಲ ಬೀಡಿನ ಬಂಗರಿಂದ 1959 ರಲ್ಲಿ ಕಟ್ಟಿಸಲ್ಪಟ್ಟಿತೆಂದು ಹೇಳಲಾಗುತ್ತದೆ. == ಆಚರಣೆ == ಶ್ರೀ ಆಧಿನಾಥ ಸ್ವಾಮಿಯನ್ನು ಮೂಲ ನಾಯಕನಾಗಿ ಪೂಜಿಸಲಾಗುತ್ತದೆ. ನಿತ್ಯವೂ ಮೂಲಸ್ವಾಮಿಗೆ ಜಲಾಭಿಷೇಕ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕಗಳನ್ನು ಮಾಡಲಾಗುತ್ತದೆ. ಇಲ್ಲಿ ದಿನದಲ್ಲಿ ಬೆಳಗ್ಗೆ ಮತ್ತು ಸಂಜೆ ಎರಡು ಹೊತ್ತು ಪೂಜೆ ನಡೆಯುತ್ತದೆ. ಮಹಾವೀರ ಜಯಂತಿ, ಜೀವದಯಾಷ್ಟಮಿ, ಮುಂತಾದ ಹಬ್ಬಗಳನ್ನು ಆಚರಿಸಲಾಗುತ್ತದೆ. ಅಮಾವಾಸ್ಯೆಯ ದಿನ ಕ್ಷೇತ್ರಪಾಲನಿಗೆ ವಿಶೇಷ ಪೂಜೆ ನಡೆಸಲಾಗುತ್ತದೆ. == ವಿಗ್ರಹಗಳು == ಈ ಬಸದಿಯಲ್ಲಿ ಪದ್ಮಾವತಿ ಅಮ್ಮನವರ ಎರಡು ಮೂರ್ತಿಗಳಿದ್ದು ಒಂದು ಮೂರ್ತಿಯನ್ನು ಗರ್ಭಗುಡಿಯಲ್ಲಿ ಇನ್ನೊಂದು ಮೂರ್ತಿಯನ್ನು ಹೊರಗಿನ ಸಭಾ ಮಂಟಪದಲ್ಲಿ ಪೂಜಿಸಲಾಗುತ್ತದೆ. ಬಸದಿಯ ಗೋಡೆಗಳಲ್ಲಿ ದ್ವಾರಪಾಲಕರ ಅಂದವಾದ ವರ್ಣ ಚಿತ್ರವಿದ್ದು, ಹೂವಿನ ಮಾಲೆಯನ್ನು ಹಾಕಿ ಅಲಂಕಾರಗೊಳಿಸಲಾಗಿದೆ. ಪ್ರಾರ್ಥನಾ ಮಂಟಪದಲ್ಲಿ ನಾಲ್ಕು ಕಂಬಗಳಿರುವ ಮಂಟಪ ಇಲ್ಲ ಆದರೆ ಜಯಘಂಟೆ, ಜಾಗಟೆಗಳನ್ನು ತೂಗುಹಾಕಲಾಗಿದೆ. ಗಂಧಕುಟಿಯು ತೀರ್ಥಂಕರ ಮಂಟಪದಲ್ಲಿದ್ದುಅದರಲ್ಲಿ 24 ತೀರ್ಥಂಕರ ಬಿಂಬಗಳನ್ನು ಪ್ರತಿಷ್ಠಾಪಿಸಲಾಗಿದೆ. ಪದ್ಮಾವತಿ ಅಮ್ಮನವರ ಮೂರ್ತಿಯು ದಕ್ಷಿಣಕ್ಕೆ ಮುಖಮಾಡಿದೆ. ಮೂಲ ಸ್ವಾಮಿಯ ಪರ್ಯಂಕಾಸನ ಭಂಗಿಯಲ್ಲಿರುವ ಬಿಂಬವು ಬಿಳಿ ಶಿಲೆಯಲ್ಲಿದ್ದು, ಸುಮಾರು ಮೂರು ಅಡಿ ಎತ್ತರವಿದೆ. ಸ್ವಾಮಿಯ ಸುತ್ತಲೂ ಮಕರ ತೋರಣ ಪ್ರಭಾವಳಿಯಿದೆ. ಬಸದಿಯ ಬಲ ಮೂಲೆಯಲ್ಲಿ ಕ್ಷೇಮಪಾಲನಾ ಸನ್ನಿಧಿ ಇದ್ದು, ಅಲ್ಲಿ ಒಂದೇ ಪೀಠದಲ್ಲಿ ಎರಡು ಮೆಟ್ಟಿಲುಗಳಂತೆ ಮಾಡಿ ಕ್ಷೇತ್ರಪಾಲನನ್ನು ಮೇಲಿನ ಮೆಟ್ಟಿಲಿನಲ್ಲಿ ಕೆಳಗೆ ನಾಗಕಲ್ಲು ಮತ್ತು ತ್ರಿಶೂಲಗಳನ್ನು ಪ್ರತಿಷ್ಠಾಪಿಸಲಾಗಿದೆ. ಬಸದಿಯ ಸುತ್ತಲೂ ಮುರಕಲ್ಲಿನಿಂದ ನಿರ್ಮಿಸಿದ ಭದ್ರವಾದ ಪ್ರಕಾರ ಗೋಡೆಯಿದೆ. == ಉಲ್ಲೇಖಗಳು ==